ಗುರುವಾರ, ಜುಲೈ 19, 2012

ಸುಭಾಷಿತಾಮೃತ 1 : subhashitamrita 1

ಸುಭಾಷಿತಾಮೃತ ೧


1. 
ಸತ್ಯಂ ಬ್ರೂಯಾತ್ ಪ್ರಿಯಂ ಬ್ರೂಯಾತ್
ಬ್ರೂಯಾತ್ ಸತ್ಯಮಪ್ರಿಯಮ್ |
ಪ್ರಿಯಂ ನಾನೃತಂ ಬ್ರೂಯಾತ್
ಏಷ ಧರ್ಮಃ ಸನಾತನಃ ||

ಸತ್ಯವನ್ನು ಹೇಳಬೇಕು. ಪ್ರಿಯವಾದದ್ದನ್ನೇ ನುಡಿಯಬೇಕು. ಅಪ್ರಿಯವಾದ ಸತ್ಯವನ್ನು ಹೇಳಬಾರದು. ಪ್ರಿಯವೆಂದು ಸುಳ್ಳನ್ನೂ ನುಡಿಯಬಾರದು. ಇದೇ ಸನಾತನ ಧರ್ಮ.

 
2. 
ಶುಕವತ್ ಭಾಷಣಂ ಕುರ್ಯಾತ್
ಬಕವತ್ ಧ್ಯಾನಮಾಚರೇತ್ |
ಅಜವತ್ ಚರ್ವಣಂ ಕುರ್ಯಾತ್
ಗಜವತ್ ಧ್ಯಾನಮಾಚರೇತ್ ||

ಗಿಣಿಯಂತೆ ಮಧುರವಾದ ಮಾತು, ಬಕದಂತೆ ತದೇಕ ಧ್ಯಾನ, ಆಡಿನಂತೆ ಅಗಿದು ತಿನ್ನುವುದು, ಆನೆಯಂತೆ ಸ್ನಾನ ಮಾಡುವುದು ಯೋಗ್ಯವಾದುದು.


3.
ಸುಂದರೋಪಿ ಸುಶೀಲೋಪಿ
ಕುಲೀನೋಪಿ ಮಹಾಧನಃ |
ಶೋಭತೇ ನ ವಿನಾ ವಿದ್ಯಾ
ವಿದ್ಯಾ ಸರ್ವಸ್ಯ ಭೂಷಣಮ್ ||

ಸುಂದರನಾಗಿರಲಿ, ಗುಣವಂತನಾಗಿರಲಿ, ಒಳ್ಳೆಯ ವಂಶದಲ್ಲಿ ಹುಟ್ಟಿರಲಿ ಅಥವಾ ಧನಿಕನೇ ಆಗಿರಲಿ - ವಿದ್ಯೆಯಿಲ್ಲದೆ ಯಾರೂ ಶೋಭಿಸಲಾರರು. ವಿದ್ಯೆಯೇ ಎಲ್ಲರಿಗೂ ಭೂಷಣ.


4. 
ಜಲಬಿಂದು ನಿಪಾತೇನ
ಕ್ರಮಶಃ ಪೂರ್ಯತೇ ಘಟಃ |
ಸ ಹೇತುಃ ಸರ್ವ ವಿದ್ಯಾನಾಂ
ಧರ್ಮಸ್ಯ ಚ ಧನಸ್ಯ ಚ ||

ನೀರಿನ ಒಂದೊಂದೇ ಹನಿ ಬಿದ್ದರೂ ಮಡಿಕೆ ಹಂತಹಂತವಾಗಿ ತುಂಬಿಕೊಳ್ಳುತ್ತದೆ. ಈ ದೃಷ್ಟಾಂತವನ್ನು ವಿದ್ಯೆ, ಧರ್ಮ ಹಾಗೂ ಹಣದ ವಿಷಯದಲ್ಲಿ ನೆನಪಿಟ್ಟುಕೊಳ್ಳಬೇಕು.


5.
ಹಾಲಾದೆ ಕರೆದರೆ, ಮೊಸರಾದೆ ಹೆತ್ತರೆ
ಮೇಲೆ ಕೆನೆಗಡೆದರೆ ಬೆಣ್ಣೆಯಾದೆ |
ಮೇಲಾದ ತುಪ್ಪವೂ ನಾನಾದೆ ಕಾಸಿದರೆ
ನೀನಾರಿಗಾದೆಯೋ ಎಲೆ ಮಾನವಾ? ||

ಗೋವಿನ ಪ್ರಶ್ನೆ - ನನ್ನನ್ನು ಕರೆದರೆ ಹಾಲು ಸಿಗುತ್ತದೆ. ಹಾಲನ್ನು ಹೆಪ್ಪಿಟ್ಟರೆ ಮೊಸರು, ಮೊಸರನ್ನು ಕಡೆದರೆ ಬೆಣ್ಣೆ, ಬೆಣ್ಣೆಯನ್ನು ಕಾಯಿಸಿದರೆ ತುಪ್ಪ ಸಿಗುತ್ತದೆ. ನನ್ನಿಂದ ಇಷ್ಟೆಲ್ಲ ಲಾಭ ಪಡೆಯುವ ಓ ಮಾನವಾ, ನಿನ್ನಿಂದ ಏನು ಲಾಭ?


6.
ಉಳುವೆ ನಾ ಭೂಮಿಯನು, ಹೊರುವೆ ನಾ ಹೇರನ್ನು
ತುಳಿದು ಕಡ್ಡಿಯ ಕಾಳ ವಿಂಗಡಿಸುವೆ |
ಕಳಪೆಯಾಗಿಹ ನೆಲವ ನಗುವ ತೋಪನು ಮಾಳ್ಪೆ
ನೀನಾರಿಗಾದೆಯೋ ಎಲೆ ಮಾನವಾ ? ||

ಗೋವಿನ ಪ್ರಶ್ನೆ - ನಾನು ಭೂಮಿಯನ್ನು ಉಳುವೆ. ಭಾರವನ್ನು ಹೊರುವೆ. ಕಡ್ಡಿಯನ್ನು ತುಳಿದು ಧಾನ್ಯವನ್ನು ವಿಂಗಡಿಸುವೆ. ಬಂಜರು ಭೂಮಿಯನ್ನು ನಳನಳಿಸುವಂತೆ ಮಾಡುವೆ. ಓ ಮಾನವ... ನಿನ್ನಿಂದೇನು ಉಪಯೋಗ?


7.
ನನ್ನ ದೇಹದ ಬೂದಿ ಗಾಳಿಯಲಿ ತೂರಿಬಿಡಿ
ಹೋಗಿ ಬೀಳಲಿ ಬತ್ತ ಬೆಳೆಯುವಲ್ಲಿ |
ಬೂದಿ ಗೊಬ್ಬರದಿಂದ ತೆನೆಯೊಂದು ನೆಗೆದು ಬರೆ
ಧನ್ಯವಾಯಿತು ಹುಟ್ಟು ಸಾವಿನಲ್ಲಿ ||


8.
ನನ್ನ ದೇಹದ ಬೂದಿ ಹೊಳೆಯಲ್ಲಿ ಹರಿಯಬಿಡಿ
ತೇಲಿ ಬೀಳಲಿ ಮೀನ ಬಾಯಿಯಲ್ಲಿ |
ಮುಷ್ಟಿ ಬೂದಿಯ ತಿಂದು ಪುಷ್ಟವಾಗಲು ಮೀನು
ಧನ್ಯವಾಯಿತು ಹುಟ್ಟು ಸಾವಿನಲ್ಲಿ ||

9.
ಶುಭಂ ಕರೋತಿ ಕಲ್ಯಾಣಂ
ಆರೋಗ್ಯ ಧನಸಂಪದಮ್ |
ಶತ್ರು ಬುದ್ಧಿವಿನಾಶಾಯ
ಸಂಧ್ಯಾಜ್ಯೋತಿ ನಮೋಸ್ತು ತೇ ||

ಈ ಸಂಧ್ಯಾದೀಪ ಮನೆಯಲ್ಲಿ ಶುಭಪರಂಪರೆ ಹೆಚ್ಚಿಸಲಿ, ಆರೋಗ್ಯ, ಸಂಪತ್ತು, ಸೌಭಾಗ್ಯಗಳನ್ನು ಅನುಗ್ರಹಿಸಲಿ; ಯಾರ ಮೇಲೂ ಶತ್ರುಬುದ್ಧಿ ಮೂಡದಿರಲಿ.


10.
ಪಿತೃವದ್ ಗುರುವೃದ್ಧೇಷು
ಮಹಿಲಾಸು ಚ ಮಾತೃವತ್ |
ಭಾತೃವತ್ ಸ್ವವಯಸ್ಯೇಷು
ಶಿಶುಬಾಲೇಷು ಪುತ್ರವತ್ ||

ಗುರುಹಿರಿಯರನ್ನು ತಂದೆಯಂತೆ, ಮಹಿಳೆಯರನ್ನು ತಾಯಿಯಂತೆ, ಸಮಾನ ವಯಸ್ಕರನ್ನು ಸೋದರರಂತೆ, ಶಿಶು-ಕಿಶೋರರನ್ನು ಮಕ್ಕಳಂತೆ ನೋಡಬೇಕು.


11.
ನಮಂತಿ ಫಲಿತಾ ವೃಕ್ಷಾಃ
ನಮಂತಿ ಚ ಬುಧಾ ಜನಾಃ |
ಶುಷ್ಕ ಕಾಷ್ಟಾನಿ ಮೂರ್ಖಾಶ್ಚ
ಭಿದ್ಯಂತೇ ನ ನಮಂತಿ ಚ ||

ಹಣ್ಣು ಬಿಟ್ಟ ಮರಗಳು ಬಾಗುತ್ತವೆ. ವಿದ್ವಾಂಸರಾದ ಜನರು ವಿನಯದಿಂದ ಬಾಗುತ್ತಾರೆ. ಆದರೆ ಒಣ ಕಟ್ಟಿಗೆಗಳು ಬಾಗುವುದಿಲ್ಲ. ಮುರಿಯುತ್ತವೆ. ಹಾಗೆಯೇ ಮೂರ್ಖರು ನಾಶವಾದಾರೇ ಹೊರತು ಬಾಘುವುದಿಲ್ಲ.


12.
ಚಿಂತಾಯಾಶ್ಚ ಚಿತಾಯಾಶ್ಚ
ಬಿಂದುಮಾತ್ರಂ ವಿಶೇಷತಃ |
ಚಿತಾ ದಹತಿ ನಿರ್ಜೀವಂ
ಚಿಂತಾ ದಹತಿ ಜೀವನಂ ||

ಚಿಂತೆಗೂ ಚಿತೆಗೂ ಒಂದು ಸೊನ್ನೆ ಮಾತ್ರ ವ್ಯತ್ಯಾಸ. ಚಿತೆ ನಿರ್ಜೀವ ಶರೀರವನ್ನು ಸುಟ್ಟರೆ ಚಿಂತೆ ಜೀವನವನ್ನೇ ಸುಡುತ್ತದೆ.


13.
ಇತರರ ದೋಷವ ನೋಡುವ ಜನರು
ಹಾಸ್ಯವ ಗೈಯುವರಲ್ಲ |
ತಮ್ಮೊಳಗಿಹುದೈ ಸಾಸಿ ದೋಷ
ಕಾಣುವುದೇ ಇಲ್ಲ ! - ಕಬೀರಾ ||

ಅನ್ಯರ ತಪ್ಪುಗಳನ್ನು ನೋಡಿ ಗೇಲಿ ಮಾಡುವುದಕ್ಕಿಂತ ತನ್ನಲ್ಲಿನ ದೋಷಗಳನ್ನು ಗುರುತಿಸಿ ತಿದ್ದಿಕೊಳ್ಳುವುದು ಅತ್ಯಂತ ಯೋಗ್ಯವಾದುದು.


14.
ದೇವರಿಗಿಲ್ಲ ಜಾತಿಯ ಭೇದ
ಭಕುತರಿಗಂತೂ ಇಲ್ಲ |
ಜಾತಿಭೇದದ ಸುಳಿಗೆ ಸಿಲುಕಿ
ಮುಳುಗದಿರೋ ಮನುಜ - ಕಬೀರಾ ||

ಭಕ್ತಿಗೆ ದೇವರು ಒಲಿಯುತ್ತಾನೆಯೇ ಹೊರತು ಭಕ್ತನ ಜಾತಿಗಲ್ಲ. ಹೀಗಿರುವಾಗ ಜಾತಿಯ ಬಗ್ಗೆ ಅನವಶ್ಯಕ ಚಿಂತಿಸಿ ಗುದ್ದಾಡಿ ನಿನ್ನ ಜೀವನವನ್ನು ವ್ಯರ್ಥ ಮಾಡಿಕೊಳ್ಳದಿರು.


15.
ಶೀಲವಂತನೇ ಶ್ರೇಷ್ಠನು, ಸಕಲ
ರತ್ನಗಳ ಗಣಿಯು |
ಮೂಲೋಕದ ಸಿರಿಸಂಪದವೆಲ್ಲ
ಶೀಲದೊಳಗೆ ಇಹುದು - ಕಬೀರಾ ||

ಒಳ್ಳೆಯ ನಡತೆಗಿಂತ ಮಿಗಿಲಾದ ಸಂಪತ್ತು ಇನ್ನೊಂದಿಲ್ಲ. ಹೀಗಾಗಿ ಶೀಲವಂತನೇ ಆತ್ಯಂತ ಶ್ರೇಷ್ಠ ಧನಿಕ.


16.
ವೃಕ್ಷಕ್ಕಲ್ಲ ವೃಕ್ಷದ ಫಲವು
ನದಿಯ ನೀರು ನದಿಗಲ್ಲ |
ಸಂತನ ಬದುಕು ಸಂತನಿಗಲ್ಲ
ಅದು ಲೋಕದ ಹಿತಕೆ - ಕಬೀರಾ ||

ಮರ ಹಣ್ಣು ಬಿಡುವುದು, ನದಿ ಹರಿಯುವುದೂ ಪರರ ಉಪಯೋಗಕ್ಕಾಗಿಯೇ. ಅದರಂತೆಯೇ, ಮಹಾಪುರುಷರು ಲೋಕದ ಹಿತಕ್ಕೋಸ್ಕರ ಬದುಕುತ್ತಾರೆಯೇ ಹೊರತು ಸ್ವಂತಕ್ಕಲ್ಲ.


17.
ಸಾಲುವೇದಗಳೇಕೆ ಮೂಲಮಂತ್ರಳೇಕೆ
ಮೇಲುಕೀಳೆಂಬ ನುಡಿಯೇಕೆ | ತತ್ವದ
ಕೀಲನರಿದವಗೆ - ಸರ್ವಜ್ಞ ||

ಮೇಲು ಕೀಳೆಂಬ ಭಾವನೆ ಇಲ್ಲದೆ ತತ್ವದ ಮರ್ಮವನ್ನರಿತು ನಡೆಯುವವನಿಗೆ ಮಂತ್ರಗಳ ಅವಶ್ಯಕತೆ ಇಲ್ಲ.

18.
ಮಾತಿಂಗೆ ಮಾತುಗಳು
ಓತು ಸಾವಿರವುಂಟು
ಮಾತಾಡಿದಂತೆ ನಡೆವಾತ | ಜಗವನ್ನು
ಕೂತಲ್ಲೇ ಆಳ್ವ - ಸರ್ವಜ್ಞ ||

ಮಾತಿಗೆ ಮಾತು ಸೇರಿದರೆ ಸಾವಿರವಾಗುತ್ತದೆ. ಆದರೆ ಆಡಿದ ಮಾತಿನಂತೆಯೇ ಯಾರು ನಡೆಯುತ್ತಾನೋ ಅವನು ಕುಳಿತಲ್ಲಿಂದಲೇ ಜಗತ್ತನ್ನು ಗೆಲ್ಲುತ್ತಾನೆ.


19.
ವೇಷವಿದ್ದೊಡೆ ಏನು
ಭಾಷೆ ಇದ್ದೊಡೆ ಏನು
ದೋಷಗಳ ಹೇಳಿ ಫಲವೇನು | ಮನದಲಿಹ
ಆಸೆಯನು ಬಿಡದನಕ - ಸರ್ವಜ್ಞ ||

ತನ್ನ ಮನಸ್ಸಿನಲ್ಲೇ ಹುದುಗಿರುವ ದುರಾಸೆಗಳನ್ನು ಬಿಡದಿದ್ದಲ್ಲಿ ಅಂಥ ವ್ಯಕ್ತಿಯ ಸಭ್ಯ ವೇಷ, ಮಧುರ ಮಾತು, ಇತರರ ದೋಷಗಳನ್ನು ಸರಿಯಾಗಿ ವಿವರಿಸಿ ಹೇಳಬಲ್ಲ ಜ್ಞಾನ ಎಲ್ಲವೂ ವ್ಯರ್ಥ.


20.
ಆತ್ಮಾರ್ಥಂ ಜೀವಲೋಕೇಽಸ್ಮಿನ್
ಕೋ ನ ಜೀವತಿ ಮಾನವಃ |
ಪರಂ ಪರೋಪಕಾರಾರ್ಥಂ
ಯೋ ಜೀವತಿ ಸ ಜೀವತಿ ||

ಈ ಲೋಕದಲ್ಲಿ ತನಗಾಗಿ ಯಾರು ತಾನೇ ಬದುಕುವುದಿಲ್ಲ? ಆದರೆ ಪರೋಪಕಾರಕ್ಕಾಗಿ ಬದುಕುವವನದ್ದೇ ನಿಜವಾದ ಬದುಕು.


21..
ಪಿಪೀಲಿಕಾರ್ಜಿತಂ ಧಾನ್ಯಂ
ಮಕ್ಷಿಕಾ ಸಂಚಿತಂ ಮಧು |
ಲುಬ್ದೇನ ಸಂಚಿತಂ ದ್ರವ್ಯಂ
ಸಮೂಲಂ ಚ ವಿನಶ್ಯತಿ ||

ಇರುವೆಗಳು ಸಂಗ್ರಹಿಸಿದ ಧಾನ್ಯ, ದುಂಬಿಗಳು ಶೇಖರಿಸಿದ ಜೇನು, ಜಿಪುಣನು ಕೂಡಿಟ್ಟ ಹಣ - ಇವೆಲ್ಲ ಪರರ ಪಾಲಾಗುತ್ತವೆ.


22.
ಯಸ್ಯ ನಾಸ್ತಿ ಸ್ವಯಂ ಪ್ರಜ್ಞಾ
ಶಾಸ್ತ್ರಂ ತಸ್ಯ ಕರೋತಿ ಕಿಂ |
ಲೋಚನಾಭ್ಯಾಂ ವಿಹೀನಸ್ಯ
ದರ್ಪಣಃ ಕಿಂ ಕರಿಷ್ಯತಿ ||

ಸ್ವಂತ ಬುದ್ದಿ ಇಲ್ಲದವನಿಗೆ ಶಾಸ್ತ್ರಗಳಿಂದ ಏನೂ ಲಾಭವಿಲ್ಲ. ಕಣ್ಣೇ ಇಲ್ಲದವನಿಗೆ ಕನ್ನಡಿಯಿಂದೇನು ಪ್ರಯೋಜನ ?


23.
ಧನಧಾನ್ಯ ಸುಸಂಪನ್ನಂ
ಸ್ವರ್ಣರತ್ನಮಯಾಕರಮ್ |
ಸುಸಂಹಿತಂ ವಿನಾ ರಾಷ್ಟ್ರಂ
ನ ಭವೇದ್ ವಿಭವಾಸ್ಪದಮ್ ||

ಧನಧಾನ್ಯಗಳು ತುಂಬಿರಬಹುದು, ಚಿನ್ನರತ್ನಗಳೂ ಹೇರಳವಾಗಿರಬಹುದು. ಆದರೆ ಒಗ್ಗಟ್ಟೊಂದಿಲ್ಲದಿದ್ದಲ್ಲಿ, ರಾಷ್ಟ್ರವು ವೈಭವವನ್ನುಗಳಿಸಲಾರದು.

24.
ಉದ್ಯಮಂ ಸಾಹಸಂ ಧೈರ್ಯಂ
ಬುದ್ಧಿಃ ಶಕ್ತಿಃ ಪರಾಕ್ರಮಃ |
ಷಡೇತೇ ಯತ್ರ ವರ್ತಂತೇ
ತತ್ರ ದೇವಾಃ ಸಾಹಾಯಕೃತ್ ||

ಪರಿಶ್ರಮ, ಸಾಹಸ, ಧೈರ್ಯ, ಬುದ್ಧಿ, ಶಕ್ತಿ ಮತ್ತು ಪರಾಕ್ರಮ - ಈ ಆರೂ ಎಲ್ಲಿರುವವೋ ಅಲ್ಲಿ ದೇವತೆಗಳೇ ಸಹಾಯ ಮಾಡುತ್ತಾರೆ.


25.
ಬಂಗಾರದಂತಹ ನಾ ಕೊಟ್ಟ ದಿನವನು
ನೀ ಹಾಳು ಮಾಡಿದೆಯೆಂದು |
ಕೆಂಪನೆ ಮುಖ ಮಾಡಿ ನನ್ನನೆ ನೋಳ್ಪನು
ದಿನಪನು ತಾ ಪೋಗುವಂದು ||

ನಾನು ಕೊಟ್ಟ ಅಮೂಲ್ಯವಾದ ದಿನವನ್ನು ನೀನು ಹಾಳು ಮಾಡಿದೆಯಲ್ಲಾ ಎಂದು ಮುಳುಗುತ್ತಿರುವ ಸೂರ್ಯನು ಮುಖ ಕೆಂಪಗೆ ಮಾಡಿ ಸೋಮಾರಿಯನ್ನು ಗದರಿಸುತ್ತಾನೆ. (ಸಮಯ ಅಮೂಲ್ಯ. ಅದನ್ನು ವ್ಯರ್ಥ ಮಾಡದಿರು.)


26.
ನದಿಗೆದುರಿಸುತ ಹೋಗುವುದಾದರೆ
ಜೀವಂತ ಮತ್ಸ್ಯವೆ ಬೇಕು |
ಹೊನಲಿನ ದಿಕ್ಕಿಗೆ ಸಾಗುವುದಾದರೆ
ಕೊಳೆತೊಂದು ಕಸಕಡ್ಡಿ ಸಾಕು ||

ನಿರ್ಜೀವ ಕಸಕಡ್ಡಿಗಳು ಪ್ರವಾಹದ ದಿಕ್ಕಲ್ಲೇ ಕೊಚ್ಚಿ ಹೋಗುತ್ತವೆ. ಪ್ರವಾಹದ ವಿರುದ್ಧ ಈಜಾಡುವುದು ಜೀವಂತ ಮೀನುಗಳಿಂದ ಮಾತ್ರ ಸಾಧ್ಯ.


27.
ಎಲ್ಲರಿಗೊಂದೇ ಭೂತಲವೆಂದೆ
ಎಲ್ಲರಿಗೊಬ್ಬನೆ ದೇವರು ಎಂದೆ |
ಸರ್ವರಿಗೊಂದೇ ಸೂರ್ಯನ ಕಣ್ಣು
ವಿಧವಿಧ ಸಸ್ಯಕೆ ಒಂದೇ ಮಣ್ಣು ||

ಎಲ್ಲರೂ ವಾಸಿಸುವ ಭೂಮಿ ಒಂದೇ. ಸರ್ವರಿಗೂ ಭಗವಂತ ಒಬ್ಬನೇ. ಎಲ್ಲರಿಗೂ ಬೆಳಕನ್ನೀಯುವ ಸೂರ್ಯನೊಬ್ಬನೇ. ವಿವಿಧ ಸಸ್ಯಗಳಿಗೆ ಆಧಾರವಾಗಿರುವ ಮಣ್ಣು ಒಂದೇ.


28.
ಬಗೆಬಗೆಯಾದರೂ ದೇಹದ ಬಣ್ಣ
ಎಲ್ಲರ ನಗೆಯೂ ಒಂದೇ ಅಣ್ಣ |
ಏತಕೆ ಯುದ್ಧವು ಏತಕೆ ಮದ್ದು
ಒಂದೇ ಮನೆಯೊಳಗೆಲ್ಲರು ಇದ್ದು ||

ದೇಹದ ಬಣ್ಣದಲ್ಲಿ ಹಲವು ಬಗೆಗಳಿದ್ದರೂ ಎಲ್ಲರ ನಗುವೂ ಒಂದೇ. ಆದ್ದರಿಂದ ಒಂದೇ ಮನೆಯೊಳಗಿರುವ ನಮ್ಮ ನಮ್ಮೊಳಗೆ ವೈಮನಸ್ಸು ಜಗಳ ಯಾಕಾಗಿ?


29.
ಧಾರುಣಿಯ ನಡಿಗೆಯಲಿ ಮೇರುವಿನ ಗುರಿಯಿರಲಿ
ಮೇರುವನು ಮರೆತಂದೆ ನಾರಕಕೆ ದಾರಿ |
ದೂರವಾದಡದೇನು ? ಕಾಲು ಕುಂಟಿರಲೇನು ?
ಊರ ನೆನಪೇ ಬಲವೋ - ಮಂಕುತಿಮ್ಮ ||

ನಿನ್ನ ನಡಿಗೆ ಭೂಮಿಯ ಮೇಲಿರಬಹುದು, ಆದರೆ ಗುರಿ ಮಾತ್ರ ಅತ್ಯುಚ್ಛವಾಗಿರಲಿ. ಹಿರಿದಾದ ಗುರಿ ಮರೆತಲ್ಲಿ ನೀನು ನಡೆವ ದಾರಿಯೇ ನಿನ್ನನ್ನು ನರಕಕ್ಕೆ ಒಯ್ಯಬಹುದು. ಎಷ್ಟೇ ದೂರವಿರಲಿ ಅಥವಾ ತನ್ನ ಕಾಲೇ ಕುಂಟಾಗಿರಲಿ, ಪಯಣಿಗನಿಗೆ ತಾನು ತಲುಪಬೇಕಾದ ಗುರಿಯ ನೆನಪೇ ಕ್ಷಣಕ್ಷಣಕ್ಕೂ ಶಕ್ತಿ ನೀಡುವಂತಹುದು.


30.
ಇಳೆಯಿಂದ ಮೊಳಕೆಯೊಗೆವಂದು ತಮಟೆಗಳಿಲ್ಲ
ಫಲ ಮಾಗುವಂದು ತುತ್ತೂರಿ ದನಿಯಿಲ್ಲ
ಬೆಳಕೀವ ಸೂರ್ಯಚಂದ್ರರದೊಂದು ಸದ್ದಿಲ್ಲ
ಹೊಲಿ ನಿನ್ನ ತುಟಿಗಳನು - ಮಂಕುತಿಮ್ಮ ||

ಭೂಮಿಯಿಂದ ಬೀಜ ಮೊಳೆಯುವಾಗ, ಕಾಯಿ ಮಾಗಿ ಹಣ್ಣಾಗುವಾಗ, ಸೂರ್ಯಚಂದ್ರರು ಬೆಳಗುವಾಗ ಯಾವುದೇ ಸದ್ದುಗದ್ದಲವಿಲ್ಲ (ಓ ಮನುಜ, ಪ್ರಸಿದ್ಧಿಯನ್ನು ಬಯಸದೆ) ಮೌನವಾಗಿ ಕೆಲಸ ಮಾಡು.


31.
ಘನತತ್ವವೊಂದಕ್ಕೆ ದಿನರಾತ್ರಿ ಮನಸೋತು
ನೆನೆಯದಿನ್ನೊಂದನೆಲ್ಲವ ನೀಡುತದರಾ |
ಅನುಸಂಧಿಯಲಿ ಜೀವಭಾರವನು ಮರೆಯುವುದು
ಹನುಮಂತನುಪದೇಶ - ಮಂಕುತಿಮ್ಮ ||

ಶ್ರೇಷ್ಠ ವಿಚಾರವೊಂದರಲ್ಲಿ ರುಚಿ ಕಾಣುತ್ತ, ಏಕಾಗ್ರ ಚಿತ್ತದಿಂದ ತನ್ನೆಲ್ಲ ಶಕ್ತಿ ಸಮಯಗಳನ್ನು ಸಮರ್ಪಿಸುತ್ತ, ಸದಾ ಸ್ವಂತಿಕೆಯನ್ನು ಮರೆಯುವುದೇ ಹನುಮಂತನ ಜೀವನ ಸಂದೇಶವಾಗಿದೆ.


32.
ರಾಮಚಂದ್ರನು ಜನಿಸಿ ರವಿಕುಲವ ಬೆಳಗಿದನು
ಕುರುಕುಲವ ಕೆಡಿಸಿದನು ಕುರುಪ ಜನಿಸಿ |
ಧರ್ಮಿಗೂ ಅಧರ್ಮಿಗೂ ಗತಿಯು ತಾನೀ ರೀತಿ
ವಿಶ್ವದಾ ಅಭಿರಾಮ ವೇಮ ಕೇಳು ||

ಶ್ರೀರಾಮನು ತಾನು ಹುಟ್ಟಿದ ಸೂರ್ಯವಂಶಕ್ಕೆ ಕೀರ್ತಿ ತಂದರೆ ದುರ್ಯೋಧನನು ಕುರುವಂಶದಲ್ಲಿ ಹುಟ್ಟಿ ಅದರ ಸರ್ವನಾಶಕ್ಕೆ ಕಾರಣನಾದ. ಧರ್ಮಿಗೂ ಅಧರ್ಮಿಗೂ ಇದೇ ವ್ಯತ್ಯಾಸ.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ